ಸಾಹಿತಿ ಡಾ. ಸಿದ್ದಲಿಂಗ ದಬ್ಬಾ ರವರು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಬಂಟನಳ್ಳಿ ಗ್ರಾಮದ ಶ್ರೀ ಮುರಿಗೆಪ್ಪ ಮತ್ತು ಲಕ್ಷ್ಮೀಬಾಯಿ ರೈತ ದಂಪತಿಗಳ ಜೇಷ್ಠ ಪುತ್ರರಾಗಿ ದಿನಾಂಕ 1-6-1977 ರಲ್ಲಿ ಜನಿಸಿದರು.
ತಾಯಿ ಮತ್ತು ಅಜ್ಜಿಯ ವಾತ್ಸಲ್ಯದಲ್ಲಿ ಬೆಳೆದ ದಬ್ಬಾ ಅವರು ಜೀವನದಲ್ಲಿ ಪರಿಶ್ರಮ, ಶಿಸ್ತು, ಸೌಜನ್ಯವನ್ನು ಮೈಗೂಡಿಸಿಕೊಂಡು ವಿದ್ಯೆ ವಿನಯ ಅವರ ಗುಣಗಳಾಗಿರುವವು. ಬಂಟನಳ್ಳಿ, ಸುಲೇಪೇಟ, ಸೇಡಂ, ಕಲಬುರಗಿಯಲ್ಲಿ ಹಂತ ಹಂತವಾಗಿ ಶಿಕ್ಷಣ ಪಡೆದು ಗುಲಬರ್ಗಾ ವಿಶ್ವವಿದ್ಯಾಲಯದಿಂದ 2003 ರಲ್ಲಿ ಕನ್ನಡ ಮತ್ತು ಜಾನಪದದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪೂರೈಸಿ ಪ್ರಥಮ ಶ್ರೇಣಿಯೊಂದಿಗೆ ಎರಡು ಚಿನ್ನದ ಪದಕ ಪಡೆದ-ಶ್ರೇಯಸ್ಸಿಗೆ ಭಾಜನರಾಗಿದ್ದಾರೆ. ಇದರ ಜೊತೆಗೆ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಡ್. ಶಿಕ್ಷಣ ಪದವಿ ಕೂಡ ಪಡೆದಿರುವರು. 2009 ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ನಡುಗನ್ನಡ ವೀರಶೈವ ಕಾವ್ಯಗಳ ಜಾನಪದ ಅಧ್ಯಯನ ಕುರಿತು ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದುಕೊಂಡಿರುವರು. ವಿದ್ಯಾರ್ಥಿ ದೆಸೆಯಿಂದಲೇ ಪರಿಸರ, ಜನಪದ, ಸಾಹಿತ್ಯ, ವಿಮರ್ಶೆಗಳಲ್ಲಿ ಒಲವು ಬೆಳೆಸಿಕೊಂಡ ಡಾ. ಸಿದ್ದಲಿಂಗ ದಬ್ಬಾ ರವರು ಕೆಲ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ
'ಐನೂಲಿ ಕರಿಬಸವಾರ್ಯರು'
(2006), ಸಾಹಿತ್ಯ ಸಂಭ್ರಮ (2007), ಕನ್ನಡ ವ್ಯಾಕರಣ ಮತ್ತು ವ್ಯಾಕರಣ ಬೋಧನಾ ವಿಧಾನ (2012), ನುಡಿಗಡಣ (2013), ಸಾಹಿತ್ಯ ಸಿಂಚನ (2018), ಕಲಬುರಗಿ ಜಿಲ್ಲೆಯ ಸಾಹಿತಿಗಳು (2018), ಸಮನ್ವಯ (2022), ಶರಣಮಾರ್ಗ (2022) ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಮತ್ತು ಅನೇಕ ಪತ್ರಿಕಾ ಬರಹ, ವಿಚಾರ ಸಂಕಿರಣಗಳಲ್ಲಿ ಮೌಲಿಕ ಪ್ರಬಂಧಗಳನ್ನು ಸಲ್ಲಿಸಿ ವಿದ್ವಾಂಸರ ಗಮನ ಸೆಳೆದ ಯುವ ಬರಹಗಾರರು, ಇವರ ನಡುಗನ್ನಡ ವೀರಶೈವ ಕಾವ್ಯಗಳ ಅಧ್ಯಯನಕ್ಕಾಗಿ ಸಿದ್ದಾಂತ ಶಿಖಾಮಣಿ ಪ್ರವಚನ ವೇದಿಕೆಯ ಪ್ರಶಸ್ತಿ, ಧಾರವಾಡದ ಬಾಲವಿಕಾಸ ಅಕಾಡೆಮಿ ಪ್ರಶಸ್ತಿಗಳಿಗೂ ಪಾತ್ರರಾಗಿರುವರು. ಶಿಕ್ಷಣ ಕ್ಷೇತ್ರದ ಸಾಧನೆಗಾಗಿ
ಬೆಂಗಳೂರಿನ ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ 2021ರಲ್ಲಿ 'ಶಿಕ್ಷಣ ರತ್ನ' ಪ್ರಶಸ್ತಿ ನೀಡಿ ಗೌರವಿಸಿದೆ. ಶರಣ ಮಾರ್ಗ ಕೃತಿಗೆ ಕಲಬುರಗಿಯ ಪಾಳಾ ಗ್ರಾಮದ ಶ್ರೀ.ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ವತಿಯಿಂದ
(2024)ರಲ್ಲಿ ಬಸವ ಪುರಸ್ಕಾರ ಲಭಿಸಿದೆ. ಡಾ. ದಬ್ಬಾ ಅವರು ಈಗ ಸರಕಾರಿ ಮಹಾವಿದ್ಯಾಲಯ ಸ್ವಾಯತ್ಯ
ಕಲಬುರಗಿಯಲ್ಲಿ ಅತಿಥಿ ಉಪನ್ಯಾಸಕರೆಂದು ಕಾರ್ಯ ನಿರ್ವಹಿಸುತ್ತಿದ್ದಾರೆ.