ಪುಟಗಳು

Translate

ಚಿಂಚೋಳಿ ತಾಲೂಕಿನ ಸಾಹಿತಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಚಿಂಚೋಳಿ ತಾಲೂಕಿನ ಸಾಹಿತಿಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಜನವರಿ 26, 2025

ಡಾ. ಸಿದ್ದಲಿಂಗ ದಬ್ಬಾ.


ಸಾಹಿತಿ ಡಾ. ಸಿದ್ದಲಿಂಗ ದಬ್ಬಾ ರವರು  ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಬಂಟನಳ್ಳಿ ಗ್ರಾಮದ ಶ್ರೀ ಮುರಿಗೆಪ್ಪ ಮತ್ತು ಲಕ್ಷ್ಮೀಬಾಯಿ ರೈತ ದಂಪತಿಗಳ ಜೇಷ್ಠ ಪುತ್ರರಾಗಿ ದಿನಾಂಕ 1-6-1977 ರಲ್ಲಿ ಜನಿಸಿದರು.

 ತಾಯಿ ಮತ್ತು ಅಜ್ಜಿಯ ವಾತ್ಸಲ್ಯದಲ್ಲಿ ಬೆಳೆದ ದಬ್ಬಾ ಅವರು ಜೀವನದಲ್ಲಿ ಪರಿಶ್ರಮ, ಶಿಸ್ತು, ಸೌಜನ್ಯವನ್ನು ಮೈಗೂಡಿಸಿಕೊಂಡು ವಿದ್ಯೆ ವಿನಯ ಅವರ ಗುಣಗಳಾಗಿರುವವು. ಬಂಟನಳ್ಳಿ, ಸುಲೇಪೇಟ, ಸೇಡಂ, ಕಲಬುರಗಿಯಲ್ಲಿ ಹಂತ ಹಂತವಾಗಿ ಶಿಕ್ಷಣ ಪಡೆದು ಗುಲಬರ್ಗಾ ವಿಶ್ವವಿದ್ಯಾಲಯದಿಂದ 2003 ರಲ್ಲಿ ಕನ್ನಡ ಮತ್ತು ಜಾನಪದದಲ್ಲಿ ಎಂ.ಎ. ಸ್ನಾತಕೋತ್ತರ ಪದವಿ ಪೂರೈಸಿ  ಪ್ರಥಮ ಶ್ರೇಣಿಯೊಂದಿಗೆ ಎರಡು ಚಿನ್ನದ ಪದಕ ಪಡೆದ-ಶ್ರೇಯಸ್ಸಿಗೆ ಭಾಜನರಾಗಿದ್ದಾರೆ. ಇದರ ಜೊತೆಗೆ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಡ್. ಶಿಕ್ಷಣ ಪದವಿ ಕೂಡ ಪಡೆದಿರುವರು. 2009 ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ನಡುಗನ್ನಡ ವೀರಶೈವ ಕಾವ್ಯಗಳ ಜಾನಪದ ಅಧ್ಯಯನ ಕುರಿತು ಸಂಶೋಧನಾ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದುಕೊಂಡಿರುವರು. ವಿದ್ಯಾರ್ಥಿ ದೆಸೆಯಿಂದಲೇ ಪರಿಸರ, ಜನಪದ, ಸಾಹಿತ್ಯ, ವಿಮರ್ಶೆಗಳಲ್ಲಿ ಒಲವು ಬೆಳೆಸಿಕೊಂಡ ಡಾ. ಸಿದ್ದಲಿಂಗ ದಬ್ಬಾ ರವರು ಕೆಲ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ
  'ಐನೂಲಿ ಕರಿಬಸವಾರ್ಯರು'
(2006), ಸಾಹಿತ್ಯ ಸಂಭ್ರಮ (2007), ಕನ್ನಡ ವ್ಯಾಕರಣ ಮತ್ತು ವ್ಯಾಕರಣ ಬೋಧನಾ ವಿಧಾನ (2012), ನುಡಿಗಡಣ (2013), ಸಾಹಿತ್ಯ ಸಿಂಚನ (2018), ಕಲಬುರಗಿ ಜಿಲ್ಲೆಯ ಸಾಹಿತಿಗಳು (2018), ಸಮನ್ವಯ (2022), ಶರಣಮಾರ್ಗ (2022) ಮುಂತಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಮತ್ತು ಅನೇಕ ಪತ್ರಿಕಾ ಬರಹ, ವಿಚಾರ ಸಂಕಿರಣಗಳಲ್ಲಿ ಮೌಲಿಕ ಪ್ರಬಂಧಗಳನ್ನು ಸಲ್ಲಿಸಿ ವಿದ್ವಾಂಸರ ಗಮನ ಸೆಳೆದ ಯುವ ಬರಹಗಾರರು, ಇವರ ನಡುಗನ್ನಡ ವೀರಶೈವ ಕಾವ್ಯಗಳ ಅಧ್ಯಯನಕ್ಕಾಗಿ ಸಿದ್ದಾಂತ ಶಿಖಾಮಣಿ ಪ್ರವಚನ ವೇದಿಕೆಯ ಪ್ರಶಸ್ತಿ, ಧಾರವಾಡದ ಬಾಲವಿಕಾಸ ಅಕಾಡೆಮಿ ಪ್ರಶಸ್ತಿಗಳಿಗೂ ಪಾತ್ರರಾಗಿರುವರು. ಶಿಕ್ಷಣ ಕ್ಷೇತ್ರದ ಸಾಧನೆಗಾಗಿ
ಬೆಂಗಳೂರಿನ ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ 2021ರಲ್ಲಿ 'ಶಿಕ್ಷಣ ರತ್ನ' ಪ್ರಶಸ್ತಿ ನೀಡಿ ಗೌರವಿಸಿದೆ. ಶರಣ ಮಾರ್ಗ ಕೃತಿಗೆ ಕಲಬುರಗಿಯ ಪಾಳಾ ಗ್ರಾಮದ ಶ್ರೀ.ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ವತಿಯಿಂದ
(2024)ರಲ್ಲಿ ಬಸವ ಪುರಸ್ಕಾರ ಲಭಿಸಿದೆ. ಡಾ. ದಬ್ಬಾ ಅವರು ಈಗ ಸರಕಾರಿ ಮಹಾವಿದ್ಯಾಲಯ ಸ್ವಾಯತ್ಯ
ಕಲಬುರಗಿಯಲ್ಲಿ ಅತಿಥಿ ಉಪನ್ಯಾಸಕರೆಂದು ಕಾರ್ಯ ನಿರ್ವಹಿಸುತ್ತಿದ್ದಾರೆ.

ಗುರುವಾರ, ಜನವರಿ 16, 2025

ಪಂಚಾಕ್ಷರಿ ಪುಣ್ಯಶೆಟ್ಟಿ

ಹಿರಿಯ ಸಾಹಿತಿಯಾದ ಪಂಚಾಕ್ಷರಿ ಪುಣ್ಯಶೆಟ್ಟಿಯವರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಮದ ಶಿವರುದ್ರಪ್ಪ ಮತ್ತು ನೀಲಮ್ಮ ದಂಪತಿಗಳಿಗೆ ದಿನಾಂಕ ೩-೨-೧೯೩೫ರಲ್ಲಿ ಜನಿಸಿದ್ದಾರೆ. ೮ನೇ ತರಗತಿಯವರೆಗೆ ಉರ್ದು ಮಾಧ್ಯಮದಲ್ಲಿ ಅಧ್ಯಯನ ಮಾಡಿ ನಂತರ ಕನ್ನಡ ಮಾಧ್ಯಮದಲ್ಲಿ ಎಚ್.ಎಸ್.ಸಿ. ಟಿ.ಸಿ.ಎಚ್. ಸಿ.ಪಿ.ಎಡ್. ಬಿ.ಪಿ.ಎಡ್. ಶಿಕ್ಷಣ ಪಡೆದು ೧೯೫೩ರಲ್ಲಿ ಹುಮನಾಬಾದ ತಾಲೂಕಿನ ದುಮ್ಮನಸೂರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ, ೧೯೯೩ರಲ್ಲಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು ೧೯೬೩ರಲ್ಲಿ `ಅಜಾದ್ ಚಂದ್ರಶೇಖರ’ (ನಾಟಕ) `ಶಿವಶರಣ ರೇವಪ್ಪಯ್ಯನವರು' `ಸಮಾಜವಾದಿ ಹೋರಾಟಗಾರ ವೈಜಿನಾಥ ಪಾಟೀಲ್'. `ಮಹಾಯೋಗಿಣಿ ಚಕ್ರಕೋಟೆ ಬಾಯವ್ವ' `ಡಾ.ಚನ್ನಬಸವ ಪಟ್ಟದ್ದೆವರ ಹೋರಾಟದ ಬದುಕು' `ಮಹಾದೇವಪ್ಪಾ ಮಿಸೆ' `ಹುತಾತ್ಮ ಬಸವರಾಜ ಹುಡಗಿ'. `ಬಿಜಪಾಲ್ ಸಿಂಗ ಸ್ವತಂತ್ರ ಹೋರಾಟಗಾರ' `ಬಿ.ಟಿ.ಸಾಸನೂರ' `ವಿರೂಪಾಕ್ಷಯ್ಯಾ ಸ್ವಾಮಿ ಐನ್ನೋಳ್ಳಿ’ `ಹುಟ್ಟು ಹೋರಾಟಗಾರ ಪಿ.ಎನ್.ಪಾಟೀಲ್'. (ಚರಿತ್ರೆಗಳು) `ಸಜ್ಜನರ ಸಂಘದಲ್ಲಿ' (ವ್ಯಕ್ತಿ ಚಿತ್ರಣ) `ಬೀದರದಿಂದ ಸಿಂಗಾಪುರಕ್ಕೆ' `ಕಲ್ಯಾಣದಿಂದ ಕಾಶ್ಮೀರಕ್ಕೆ’ (ಪ್ರವಾಸ ಕಥನಗಳು) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರು ಚಿಂಚೋಳಿ ತಾಲೂಕಿನ ಪ್ರಥಮ ಕಸಾಪ ಅಧ್ಯಕ್ಷರಾಗಿ, ಎರಡು ಅವಧಿಗೆ ಬೀದರ ಜಿಲ್ಲಾ ಕಸಾಪ ಅಧ್ಯಕ್ಷರಾಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಭಾಲ್ಕಿ ಮಠದಿಂದ ಉತ್ತಮ ಲೇಖಕ ಪ್ರಶಸ್ತಿ, ಹಾರಕೂಡ ಹಿರೇಮಠ ಸಂಸ್ಥಾನದಿAದ ಚನ್ನಶ್ರೀ ಪ್ರಶಸ್ತಿ, ಬಸವಕಲ್ಯಾಣ ಅನುಭವ ಮಂಟಪದಿAದ ಜಯದೇವಿ ತಾಯಿ ಲಿಗಾಡೆಯವರ ಸ್ಮರಣಾರ್ಥ ರಾಷ್ಟ್ರೀಯ ಪುರಸ್ಕಾರ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರ ಕವನ, ಲೇಖನ, ಬರಹಗಳು ಭಾಲ್ಕಿಯ ಶಾಂತಿ ಕಿರಣ ದ್ವೆöÊಮಾಸಿಕ ಹಾಗೂ ಉತ್ತರ ಕರ್ನಾಟಕ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಬೀದರದ ಖಾಯಂ ನಿವಾಸಿಯಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ.

ಡಾ. ನಿಜಲಿಂಗ ಆರ್ ರಗಟೆ

ಸಾಹಿತಿ ನಿಜಲಿಂಗ ಆರ್.ರಗಟೆ ಯವರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚುಮ್ಮನಚೋಡ ಗ್ರಾಮದ ರಾಜಗುರು ಮತ್ತು ಇರಮ್ಮಾ ದಂಪತಿಗಳಿಗೆ ದಿನಾಂಕ ೪-೧೧-೧೯೭೮ರಲ್ಲಿ ಜನಿಸಿದ್ದಾರೆ. ಎಂ.ಬಿ.ಎ.ಮತ್ತು ಡಿ.ಸಿ.ಎ.ಪದವಿ ಪಡೆದ ಇವರು ಭಾಲ್ಕಿಯ ಡಿ.ಸಿ.ಸಿ ಬ್ಯಾಂಕ್ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು `ಕನ್ನಡ ಒಡಲು', `ಕನ್ನಡ ಕಣಜ', `ನನ್ನ ಕವನ' (ಕವನ ಸಂಕಲನಗಳು) `ಕಥಾಗುಚ್ಚ' (ಕಥಾ ಸಂಕಲನ) `ಸಿರಿವಂತನ ದರ್ಪ' (ನಾಟಕ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಸಂಯುಕ್ತ ಕರ್ನಾಟಕ, ಬೀದರ ರಹಸ್ಯ, ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ೨೦೦೧ರಿಂದ ೨೦೦೫ರವರೆಗೆ ಚಿಂಚೋಳಿ ತಾಲೂಕಿನ ಚಿಮ್ಮನಚೋಡ್ ವಲಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಸಾಹಿತ್ಯ ಸಿಂಚನ ಬೆಂಗಳೂರು ಮತ್ತು ಬಿಜಾಪುರ ಲೇಖಕರ ಬಳಗದಿಂದ ರಾಜ್ಯ ಮಟ್ಟದ ಪ್ರಶಸ್ತಿ, ಶಹಾಪೂರ ಸಾಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ, ಕಾಸರಗೋಡಿನ ರಾಜ್ಯಮಟ್ಟದ ಕವಿ ಸಮ್ಮೇಳನದಲ್ಲಿ ಕವಿರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಅಷ್ಟೇಯಲ್ಲದೆ ಇವರಿಗೆ ನ್ಯಾಷನಲ್ ವರ್ಚುಲ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿಯು ನೀಡಿ ಗೌರವಿಸಲಾಗಿದೆ. ಹಾಗೂ ನೈಜದೀಪ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಬೀದರ ಹಾಗೂ ಚಿಂಚೋಳಿ ತಾಲೂಕಿನ ಚಿಮ್ಮನಚೋಡದಲ್ಲಿ ಕೆಲವು ಕಾರ್ಯಕ್ರಮಗಳು ಮಾಡಿ ಸಾಹಿತಿ, ಕಲಾವಿದರಿಗೆ ಪ್ರಶಸ್ತಿ ಪುರಸ್ಕಾರಗಳು ನೀಡಿ ಪ್ರೊತ್ಸಾಹಿಸುತ್ತಿದ್ದಾರೆ. ಇವರಿಗೆ ೨೦೨೧ ಜನೆವರಿ ೨೧ ರಂದು ಬೀದರ ತಾಲೂಕಾ ೨ನೇ ತಾಲೂಕಾ ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಸದ್ಯ ಇವರು ಬೀದರನಲ್ಲಿ ನೆಲೆಸಿದ್ದಾರೆ.

ಡಾ. ರಾಮಚಂದ್ರ ಗಣಾಪೂರ

ಸಾಹಿತಿ ಡಾ.ರಾಮಚಂದ್ರ ಗಣಾಪೂರ. ರವರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸುಲೆಪೇಟ್ ಗ್ರಾಮದ ಭೀಮಣ್ಣ ಮತ್ತು ಈರಮ್ಮ ದಂಪತಿಗಳಿಗೆ ದಿನಾಂಕ ೧೫-೦೨-೧೯೭೫ರಲ್ಲಿ ತನ್ನ ತಾಯಿ ತವರುಮನೆ ಹುಮನಾಬಾದ ತಾಲೂಕಿನ ಹುಡಗಿ ಗ್ರಾಮದಲ್ಲಿ ಜನಿಸಿದ್ದಾರೆ. ಎಂ.ಎ. ಎಂ. ಫೀüಲ್., ಪಿ.ಹೆಚ್.ಡಿ. ಪದವಿಧರರಾದ ಇವರು ಬೀದರದ ಜ್ಞಾನಕಾರಂಜಿ ಹಾಲಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಎಂಟು ವರುಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು `ನಿಮ್ಮೊಡನಿದ್ದೂ ನಿಮ್ಮಂತಾಗದೆ', `ತನುವೆಂಬ ಮನೆಯೊಳಗೆ,' `ಸಾಹಿತ್ಯ ಸಮೀಕ್ಷೆ,' `ಶಿಷ್ಯನೆಂಬಾ ವನಕ್ಕೆ', `ನಿತ್ಯೋತ್ಸವದ ಕವಿ ನಿಸಾರ್ ಅಹಮದ್', `ನಾಗಾರ್ಜುನ ಕಾಳಗ', `ಗುಲಬರ್ಗಾ ಜಿಲ್ಲೆಯ ಆಧುನಿಕ ವಚನ ಸಾಹಿತ್ಯ', `ಸುವರ್ಣ ದಾಂಪತ್ಯ', `ಕ್ವಾಟಿ ಜಾನಪದ', `ಸೌಮ್ಯ ಸಿರಿ.’ ಇತ್ಯಾದಿ ೧೪ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಕಲಬುರಗಿ ಹಾಗೂ ರಾಯಚೂರು ಆಕಾಶವಾಣಿಯಿಂದ ಅನೇಕ ಕಾರ್ಯಕ್ರಮಗಳು ಬಿತ್ತರಗೊಂಡಿವೆ. ಮತ್ತು ರಾಷ್ಟಿçÃಯ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳು ಸೇರಿದಂತೆ ಹಲವಾರು ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇವರಿಗೆ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿಯ ವತಿಯಿಂದ ಡಾ. ಅಂಬೇಡ್ಕರ್ ಫೆಲೋಶಿಪ್ ಪ್ರಶಸ್ತಿ, ಕವಿ ಸೂರ್ಯ ಪ್ರಶಸ್ತಿ, ಕಲ್ಯಾಣ ಚನ್ನಶ್ರೀ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಮತ್ತು `ಸ್ನೇಹಗಂಗಾ' ಮಾಸಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಮಲ್ಲಿನಾಥ ಚಿಂಚೋಳಿ

ಸಾಹಿತಿ ಮಲ್ಲಿನಾಥ ಚಿಂಚೋಳಿ ರವರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚನ್ನೂರು ಗ್ರಾಮದ ಹಣಮಂತರಾವ ಮತ್ತು ಬಸಮ್ಮಾ ದಂಪತಿಗಳಿಗೆ ದಿನಾಂಕ ೨೫-೯-೧೯೭೦ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ,ಇಡಿ. ಪದವಿಧರರಾದ ಇವರು ೧೯೯೫ರಿಂದ ಹುಮನಾಬಾದಿನ ರಾಮ ಮತ್ತು ರಾಜ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೧೯೮೬ರಲ್ಲಿ ವಿದ್ಯಾರ್ಥಿ ಜೀವನದಲ್ಲಿಯೇ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡ ಇವರು `ಚಂದ್ರ ಚನ್ನೂರು' ಎಂಬ ಕಾವ್ಯನಾಮದಲ್ಲಿ ಪತ್ರಿಕೆಗಳಲ್ಲಿ ಕವಿತೆಗಳು ಪ್ರಕಟಿಸಿ ಓದುಗರಿಂದ ಮೆಚ್ಚುಗೆಯು ಗಳಿಸಿದ್ದಾರೆ. ಆದರೆ ಬಹಳ ವರ್ಷಗಳಿಂದ ಪುಸ್ತಕ ಪ್ರಕಟಿಸದೆ ಉಳಿದ ಇವರು ೨೦೧೮ರಲ್ಲಿ `ಮುಂಜಾವಿನ ಮಲ್ಲಿಗೆ' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಇವರ ಕತೆ, ಕವನ, ಲೇಖನಗಳು ಸಂಯುಕ್ತ ಕರ್ನಾಟಕ, ಕರ್ಮವೀರ, ಮಯೂರ, ಗ್ರೀನೊಬಲ್ಸ್, ಕನ್ನಡ ನಾಡು, ಕೆಸರಿ ಘರ್ಜನೆ, ಸತ್ಯಕಾಮ ಮೊದಲಾದವುಗಳಲ್ಲಿ ಹಾಗೂ ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ರಾಜ್ಯ ಮಟ್ಟದ ಕಮ್ಮಟಗಳಲ್ಲಿ ಪಾಲ್ಗೊಂಡು ಅನೇಕ ಉಪನ್ಯಾಸವು ನೀಡಿದ್ದಾರೆ. ಸದ್ಯ ಇವರು ಹುಮನಾಬಾದಿನ ನಿವಾಸಿಯಾಗಿದ್ದು, ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಸುಮಾರು ಇಲ್ಲಿಯವರೆಗೆ ೧೦೦೦ಕ್ಕಿಂತ ಹೆಚ್ಚು ಕವನಗಳು, ೧೫. ಕತೆಗಳು, ಹಲವಾರು ಲೇಖನ, ಬಿಡಿ ಬರಹಗಳು ಬರೆದಿದ್ದಾರೆ.

ಮಾನಶೆಟ್ಟಿ ಬೆಳಕೇರಿ

ಹಿರಿಯ ಮಕ್ಕಳ ಸಾಹಿತಿ ಮಾನಶೆಟ್ಟಿ ಬೆಳಕೇರಿ ರವರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚಿಮ್ಮಾ ಇದಲಾಯಿ ಎಂಬ ಗ್ರಾಮದ ಸಿದ್ದಪ್ಪ ಮತ್ತು ಭೋಗಮ್ಮ ದಂಪತಿಗಳಿಗೆ ದಿನಾಂಕ ೧೨-೨-೧೯೪೯ರಲ್ಲಿ ಜನಿಸಿದ್ದಾರೆ. ಎಂ.ಎ.ಎಂ.ಎಡ್ ಪದವಿಧರರಾದ ಇವರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಆಸಕ್ತರಾಗಿ ೧೯೬೫ರಲ್ಲಿ `ಹೂಗೊಂಚಲು' ಮತ್ತು ೧೯೮೪ರಲ್ಲಿ `ಮತ್ತೆ ಬಂತು ವಸಂತ' (ಮಕ್ಕಳ ಕವನ ಸಂಕಲನಗಳು) ೨೦೧೫ರಲ್ಲಿ `ಕರ್ನಾಟಕ ವಿಮೋಚನೆ' (ಲೇಖನ ) ೨೦೧೬ರಲ್ಲಿ `ಬೆಳಕೇ ರಿ' (ಚುಟುಕುಗಳ ಸಂಕಲನ) ೨೦೧೭ರಲ್ಲಿ `ಕಲ್ಯಾಣ ಕರ್ನಾಟಕ ಸಮಗ್ರ ಇತಿಹಾಸ' ಮತ್ತು `ಕನ್ನಡ ಕುಲಗುರು ಬಸಪ್ಪ ಕರಕಾಳೆ' ಹಾಗೂ ೨೦೧೯ರಲ್ಲಿ 'ಹನುಮಾಯಣ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರು ಕಾವ್ಯ, ಪದ್ಯ, ಕಥನ ಕವನ, ಅಕರಾದಿ ಪಂದ್ಯ, ವಿಡಂಬನೆ, ಹಾಸ್ಯ, ಮೊದಲಾದ ಸೃಜನಶೀಲ ಬರಹಗಳನ್ನು ಬರೆದಿದ್ದಾರೆ. ಅವು ನಾಡಿನಾದ್ಯಂತ ಹಲವಾರು ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿಯೂ ಪ್ರಕಟ,ಪ್ರಸಾರವಾಗಿವೆ. ಮತ್ತು ಇವರು ನಟ ಅನಂತನಾಗ ನಟಿಸಿದ `ಬರ' ಚಲನ ಚಿತ್ರದಲ್ಲಿ ನಟಿಸಿ ಕಲಾವಿದರಾಗಿಯು ಗುರ್ತಿಸಿಕೊಂಡಿದ್ದಾರೆ. ಆದ್ದರಿಂದ ಇವರ ಕಲೆ, ಸಾಹಿತ್ಯ, ಶೈಕ್ಷಣಿಕ ಸಾಧನೆಗೆ ೧೯೮೪ರಲ್ಲಿ ಕಲಬುರಗಿಯಿಂದ `ಯುವ ಮಕ್ಕಳ ಸಾಹಿತಿ' ಎಂಬ ಪ್ರಶಸ್ತಿ, ೨೦೦೬ರಲ್ಲಿ ಡಾ.ಅಬ್ದುಲ್ ಕಲಾಮ್ ವಿಜನ್ ವತಿಯಿಂದ ಕನ್ನಡ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಮತ್ತು ೨೦೦೬ರಲ್ಲಿ ಬೀದರನಲ್ಲಿ ನಡೆದ ೭೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಕ್ಕಳ ಕವನವು ವಾಚನ ಮಾಡಿದರು. .