ಪುಟಗಳು

Translate

ಗುರುವಾರ, ಜನವರಿ 16, 2025

ಪಂಚಾಕ್ಷರಿ ಪುಣ್ಯಶೆಟ್ಟಿ

ಹಿರಿಯ ಸಾಹಿತಿಯಾದ ಪಂಚಾಕ್ಷರಿ ಪುಣ್ಯಶೆಟ್ಟಿಯವರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಮದ ಶಿವರುದ್ರಪ್ಪ ಮತ್ತು ನೀಲಮ್ಮ ದಂಪತಿಗಳಿಗೆ ದಿನಾಂಕ ೩-೨-೧೯೩೫ರಲ್ಲಿ ಜನಿಸಿದ್ದಾರೆ. ೮ನೇ ತರಗತಿಯವರೆಗೆ ಉರ್ದು ಮಾಧ್ಯಮದಲ್ಲಿ ಅಧ್ಯಯನ ಮಾಡಿ ನಂತರ ಕನ್ನಡ ಮಾಧ್ಯಮದಲ್ಲಿ ಎಚ್.ಎಸ್.ಸಿ. ಟಿ.ಸಿ.ಎಚ್. ಸಿ.ಪಿ.ಎಡ್. ಬಿ.ಪಿ.ಎಡ್. ಶಿಕ್ಷಣ ಪಡೆದು ೧೯೫೩ರಲ್ಲಿ ಹುಮನಾಬಾದ ತಾಲೂಕಿನ ದುಮ್ಮನಸೂರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ, ೧೯೯೩ರಲ್ಲಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು ೧೯೬೩ರಲ್ಲಿ `ಅಜಾದ್ ಚಂದ್ರಶೇಖರ’ (ನಾಟಕ) `ಶಿವಶರಣ ರೇವಪ್ಪಯ್ಯನವರು' `ಸಮಾಜವಾದಿ ಹೋರಾಟಗಾರ ವೈಜಿನಾಥ ಪಾಟೀಲ್'. `ಮಹಾಯೋಗಿಣಿ ಚಕ್ರಕೋಟೆ ಬಾಯವ್ವ' `ಡಾ.ಚನ್ನಬಸವ ಪಟ್ಟದ್ದೆವರ ಹೋರಾಟದ ಬದುಕು' `ಮಹಾದೇವಪ್ಪಾ ಮಿಸೆ' `ಹುತಾತ್ಮ ಬಸವರಾಜ ಹುಡಗಿ'. `ಬಿಜಪಾಲ್ ಸಿಂಗ ಸ್ವತಂತ್ರ ಹೋರಾಟಗಾರ' `ಬಿ.ಟಿ.ಸಾಸನೂರ' `ವಿರೂಪಾಕ್ಷಯ್ಯಾ ಸ್ವಾಮಿ ಐನ್ನೋಳ್ಳಿ’ `ಹುಟ್ಟು ಹೋರಾಟಗಾರ ಪಿ.ಎನ್.ಪಾಟೀಲ್'. (ಚರಿತ್ರೆಗಳು) `ಸಜ್ಜನರ ಸಂಘದಲ್ಲಿ' (ವ್ಯಕ್ತಿ ಚಿತ್ರಣ) `ಬೀದರದಿಂದ ಸಿಂಗಾಪುರಕ್ಕೆ' `ಕಲ್ಯಾಣದಿಂದ ಕಾಶ್ಮೀರಕ್ಕೆ’ (ಪ್ರವಾಸ ಕಥನಗಳು) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರು ಚಿಂಚೋಳಿ ತಾಲೂಕಿನ ಪ್ರಥಮ ಕಸಾಪ ಅಧ್ಯಕ್ಷರಾಗಿ, ಎರಡು ಅವಧಿಗೆ ಬೀದರ ಜಿಲ್ಲಾ ಕಸಾಪ ಅಧ್ಯಕ್ಷರಾಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಭಾಲ್ಕಿ ಮಠದಿಂದ ಉತ್ತಮ ಲೇಖಕ ಪ್ರಶಸ್ತಿ, ಹಾರಕೂಡ ಹಿರೇಮಠ ಸಂಸ್ಥಾನದಿAದ ಚನ್ನಶ್ರೀ ಪ್ರಶಸ್ತಿ, ಬಸವಕಲ್ಯಾಣ ಅನುಭವ ಮಂಟಪದಿAದ ಜಯದೇವಿ ತಾಯಿ ಲಿಗಾಡೆಯವರ ಸ್ಮರಣಾರ್ಥ ರಾಷ್ಟ್ರೀಯ ಪುರಸ್ಕಾರ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರ ಕವನ, ಲೇಖನ, ಬರಹಗಳು ಭಾಲ್ಕಿಯ ಶಾಂತಿ ಕಿರಣ ದ್ವೆöÊಮಾಸಿಕ ಹಾಗೂ ಉತ್ತರ ಕರ್ನಾಟಕ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಬೀದರದ ಖಾಯಂ ನಿವಾಸಿಯಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ