ಪುಟಗಳು

Translate

ಭಾನುವಾರ, ಫೆಬ್ರವರಿ 9, 2025

ವಿಜಯಲಕ್ಷ್ಮಿ ಚ ಸಿಂಗೋಡಿ.


ಉದಯೋನ್ಮುಖ ಕವಯತ್ರಿಯಾದ ಶ್ರೀಮತಿ ವಿಜಯಲಕ್ಷ್ಮಿ ಚ ಸಿಂಗೋಡಿ ಯವರು ಕಲಬುರಗಿ ನಗರದ ಆಳಂದ ರಸ್ತೆಯ ವಿಜಯನಗರ ಕಾಲೋನಿಯ ನಿವಾಸಿಯಾಗಿದ್ದಾರೆ. ಬಿ.ಎ.ಬಿ.ಇಡಿ(ಹಿಂದಿ) ಪದವಿಧರರಾದ ಇವರು ಚಂದ್ರಕಾಂತ ಸಿಂಗೋಡಿಯವರ ಧರ್ಮಪತ್ನಿಯಾಗಿದ್ದು ಇವರು 'ವಿ.ತಿ.ಬಾಳಿ' ಎಂಬ ಕಾವ್ಯನಾಮದಿಂದ ಕವನ ಲೇಖನ ಚುಟುಕು ಮತ್ತು ಆಧುನಿಕ ವಚನಗಳನ್ನು ಬರೆಯುತ್ತಿದ್ದಾರೆ. 
ಇವರು ಬರೆದ ಕವನ ಲೇಖನ ಚುಟುಕು ಹನಿಗವನ ಮತ್ತಿತರ ಬರಹಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ 'ಕಲ್ಯಾಣ ಸಿರಿಗನ್ನಡ' ಸೇರಿದಂತೆ ಕೆಲ ಅಂತರ್ಜಾಲ ಕನ್ನಡ ಸಾಹಿತ್ಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 
ಇವರು ಸಾಹಿತ್ಯ ಚಟುವಟಿಕೆಗಳೊಂದಿಗೆ ಧಾರ್ಮಿಕ ಸಾಮಾಜಿಕ ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದು ಈಗಾಗಲೇ ಸಾಕಷ್ಟು ಕಡೆಗಳಲ್ಲಿ ಗುರ್ತಿಸಿ ಕೊಂಡಿದ್ದಾರೆ. ಅಷ್ಟೇಯಲ್ಲದೇ ಇವರು  ಯೋಗ ಶಿಕ್ಷಕರು ಕೂಡ ಆಗಿದ್ದು ಹಲವಾರು ಜನರಿಗೆ ಉಚಿತವಾಗಿ ಯೋಗ ಕಲಿಸುತ್ತಾರೆ. 
ಇವರ ಕಲೆ ಸಾಹಿತ್ಯ  ಸಂಸ್ಕೃತಿ ಸೇರಿದಂತೆ ಮೊದಲಾದ ಬಹುತೇಕ ಕ್ಷೇತ್ರದಲ್ಲಿ ಇವರು ಮಾಡಿದ ಕಾರ್ಯ ಸಾಧನೆಯನ್ನು ಕಂಡು ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ:
ಕಲಬುರ್ಗಿಯ ಪ್ರಿಯದರ್ಶಿನಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ 70 ನೇ ವರ್ಷದ ರಾಜ್ಯೋತ್ಸವ ಪ್ರಶಸ್ತಿ, ಸುಜ್ಞಾನ ವಿದ್ಯಾ ಪೀಠ ಸಂಸ್ಥೆಯ ವತಿಯಿಂದ ಶ್ರೀ ಕೃಷ್ಣ ದೇವರಾಯ ರಾಷ್ಟ್ರೀಯ ಪ್ರಶಸ್ತಿ, ನಾಡಿನ ಸಮಾಚಾರ ಸೇವಾ ಸಂಘದ ವತಿಯಿಂದ 'ಸಾವಿತ್ರಿ ಬಾಯಿ ಪುಲೆ ರಾಷ್ಟ್ರೀಯ ಪ್ರಶಸ್ತಿ, ಕನ್ನಡ ನುಡಿ ಮತ್ತು ಸಾಹಿತ್ಯ ವೇದಿಕೆ ವತಿಯಿಂದ 'ಸಿದ್ದಗಂಗಾ ಶ್ರೀ' ಪ್ರಶಸ್ತಿ, (ಧಾರ್ಮಿಕ) ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.  ಅಷ್ಟೇಯಲ್ಲದೇ ಇವರು ತಮ್ಮ ಎರಡೂ ಕಣ್ಣುಗಳನ್ನು ಬೊರುಕಾ ನೇತ್ರಾಲಯ ಸಂಸ್ಥೆಗೆ ದಾನವಾಗಿ ಬರೆದು ಕೊಟ್ಟಿದ್ದಾರೆಂದರೆ ಎಂಥಹ ವಿಶಾಲ ಹೃದಯ ಉಳ್ಳವರು ಅನ್ನೊದು ಇದರಿಂದ ತಿಳಿದು ಬರುತ್ತದೆ. 
ಸಾಹಿತ್ಯದೊಂದಿಗೆ ಧಾರ್ಮಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಇವರು ಉತ್ತಮ ಸಮಾಜ ಸೇವಕಿ ಹಾಗೂ ಮಹಿಳಾ ಪರ ಹೋರಾಟಗಾರು ಆಗಿದ್ದಾರೆ. ಹಾಗೂ ಕಲೆ ,ಸಾಹಿತ್ಯ ,ಸಂಗೀತ, ಸಾಮಾಜಿಕ ,ಧಾರ್ಮಿಕ ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡಿರುವ ಇವರು ಬಹುಮುಖ ಪ್ರತಿಭೆಯ ವ್ಯಕ್ತಿತ್ವ ಉಳ್ಳವರಾಗಿದ್ದು ಆದ್ದರಿಂದ ಇವರು ಮುಂದಿನ ದಿನಗಳಲ್ಲಿ ಈ‌ ಸಾಹಿತ್ಯ ಕ್ಷೇತ್ರದಲ್ಲಿ  ಉತ್ತಮ ಕವಯತ್ರಿಯಾಗಿ ಹೊರ ಹೊಮ್ಮಲೆಂದು ಹಾರೈಸೋಣ.

- ಮಚ್ಚೇಂದ್ರ ಪಿ ಅಣಕಲ್. ಕಲಬುರಗಿ

ಮಂಗಳವಾರ, ಫೆಬ್ರವರಿ 4, 2025

ಸಾಸಿರ ನಾಡಿನ ಸಾಹಿತಿ ಧರ್ಮಣ್ಣ ಧನ್ನಿ.



            ಸಾಸಿರ ನಾಡಿನ, ಒಲವಿನ ಕವಿಯೆಂದೆ ಕರೆಯಲ್ಪಡುವ ಧರ್ಮಣ್ಣ ಎಚ್ ಧನ್ನಿ ಅವರು ಬಹುಮುಖ ಪ್ರಭೆಯ ಹಿರಿಯ ಕವಿ.  ವೃತ್ತಿಯಲ್ಲಿ ಶಿಕ್ಷಕರಾಗಿ ಪೃವೃತ್ತಿಯಲ್ಲಿ ಸಾಹಿತಿಯಾಗಿ, ಪತ್ರಕರ್ತರಾಗಿ ನುಡಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದವರು. ತಂದೆ ಹುಸನಪ್ಪಾ, ತಾಯಿ ತಾನಾಬಾಯಿ ಉದರದಲ್ಲಿ 1ಜುಲೈ 1967 ರಂದು ಜನನ. ತಂದೆ ತಾಯಿಗಳಿಬ್ಬರು ಜನಪದ ಕಲಾವಿದರು. ಇಂಥ ಸಾಂಸ್ಕೃತಿಕ ಪರಿಸರದ ಮನೆಯಲ್ಲಿ ಜೋಗುಳ ಪದ ಕೇಳುತ್ತಾ ಬೆಳೆದು ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಬೆಳೆದವರು. 
         ಗ್ರಾಮದ ಸರಕಾರಿ ಮಾದರಿ  ಪ್ರಾಥಮಿಕ ಶಾಲೆ ಹಾಗೂ ವಿದ್ಯಾ ವರ್ಧಕ  ಸಂಘ ಪ್ರೌಢ ಶಾಲೆಯಲ್ಲಿ ಅಭ್ಯಾಸ ಮಾಡಿದವರು. ಈ ಪ್ರೌಢ ಶಾಲೆಯಲ್ಲಿ ಓದುತ್ತಿರುವಾಗಲೇ ಕವನ ರಚನೆಯ ಗೀಳು ಹಚ್ಚಿಕೊಂಡರು. ಖ್ಯಾತ ಜನಪದ ವಿದ್ವಾಂಸ  ವಿಜಯಪೂರದ ಸಿಂಪಿ ಲಿಂಗಣ್ಣ ಅವರು 1982ರಲ್ಲಿ ಈ ಪ್ರೌಢ ಶಾಲೆಗೆ ಬಂದಾಗ ತಾವು ಬರೆದ ಕವನವೊಂದು ತೋರಿಸಿದರು. ಅವರು ಮೆಚ್ಚುಗೆ ಸೂಚಿಸಿ ಧನ್ನಿ ಅವರನ್ನು ಬೆನ್ನು ತಟ್ಟಿ ಶುಭ ಹಾರೈಸಿದ್ದರು. ಅಂದಿನಿಂದ ಇವರು ನಿರಂತರವಾಗಿ ಕಾವ್ಯ, ಗದ್ಯ, ಭಾಷಣ, ನಾಟಕ ಮತ್ತು ರೂಪಕಗಳನ್ನು ಬರೆಯುವ ಹವ್ಯಾಸ ಕರಗತ ಮಾಡಿಕೊಂಡರು.
        ಧರ್ಮಣ್ಣ ಧನ್ನಿ ಅವರು ಬರೆದ ಅನೇಕ ಭಾಷಣ, ಕಾವ್ಯ ವಾಚನ, ರೂಪಕಗಳು, ಚಿಂತನಗಳು ಕಲಬುರಗಿ ಆಕಾಶವಾಣಿಯಿಂದ ಪ್ರಸಾರವಾಗಿವೆ. ಈ ಎಲ್ಲಾ ಸಾಹಿತ್ಯದ ಪ್ರಕಾರಗಳ ರಚನೆಗೆ ಮನೆಯ ಪರಿಸರವೇ ಪ್ರಭಾವ. ಮೌನ ಮಾತಾಡಿದಾಗ, ಒಡಲ ಬ್ಯಾನಿ, ನೆನಪಿನ ಅಂಗಳದಲ್ಲಿ ಹಾಗೂ ಚುಟುಕು ಕವನ ಸಂಕಲನಗಳು ಸೇರಿ ನಾಲ್ಕು ಸಂಪಾದಿತ ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಕನ್ನಡ ನೆಲ ಜಲ ಭಾಷೆ ಸಂಸ್ಕೃತಿಗಳನ್ನು ಪ್ರೀತಿಸುವ ಕವಿ ಹೃದಯ ಧನ್ನಿ ಅವರದು. ಅನೇಕ ಸಾಹಿತ್ಯಕ ಕಾರ್ಯಕ್ರಮಗಳನ್ನು ರೂಪಿಸಿ ನೆರವೇರಿಸಿದ್ದಾರೆ. ಸಾಕ್ಷರತಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ತರುವಲ್ಲಿ ಅವರ ಪಾತ್ರ ತುಂಬಾ ಹಿರಿದು. ಸಾಕ್ಷರತಾ ಕವಿಕಾ ಕೇಂದ್ರಗಳನ್ನು ವ್ಯವಸ್ಥಿತವಾಗಿ ನಡೆಸಿ ರಾಜ್ಯ ಮಟ್ಟಕ್ಕೆ ಪರಿಚಯಿಸಿದ ಕೀರ್ತಿ ಧನ್ನಿ ಅವರಿಗೆ ಸಲ್ಲುತ್ತದೆ.
       ಸಧ್ಯ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಷತ್ತಿನ 'ಸಂಕಥನ'ಮತ್ತು 'ಕನ್ನಡ ಸಾರಥಿ' ಕೃತಿಗಳೆರಡು ಇವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿವೆ. ಆಳಂದ ನ ಜೀವ ನದಿ ಅಮರ್ಜಾ ನದಿಯ ಹೆಸರಲ್ಲಿ 2020 ರಲ್ಲಿ ಅಮರ್ಜಾ ಪ್ರಕಾಶನ ಸ್ಥಾಪಿಸಿ ಕಲಬುರಗಿ ಭಾಗದ ಅನೇಕ  ಉದಯೋನ್ಮುಖ ಬರಹಗಾರರ ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದಾರೆ. ಬಹುಮುಖ ಪ್ರತಿಭೆಯ ಕವಿ ಧರ್ಮಣ್ಣ ಎಲ್ಲರ ಪ್ರೀತಿಯ ಅಣ್ಣ ಕೂಡ. ಅನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿ, ಪುರಸ್ಕಾರಗಳು ಪಡೆದು ಕೊಂಡಿದ್ದಾರೆ. ಕವಿ ಮನಸಿನ ಧರ್ಮಣ್ಣ ಎಚ್ ಧನ್ನಿ ಅವರು ಕಲ್ಯಾಣ ಕರ್ನಾಟಕ ಭಾಗದ ಹಿರಿಯ ಬರಹಗಾರರು. ಅವರ ಕಾವ್ಯ ಪ್ರೀತಿಗೆ ಭಾವ ಬೇಸುಗೆ ಒಲವ ಪ್ರೀತಿ ಝರಿಯಾಗಿ ಹರಿಯುತ್ತಿದ್ದಾರೆ.

 *ಕೃತಿಗಳು*

ಮೌನ ಮಾತಾಡಿದಾಗ(ಕವನ ಸಂಕಲನ)
ಒಡಲ ಬ್ಯಾನಿ (ಕವನ ಸಂಕಲನ)
ನೆನಪಿನ ಅಲೆಯಲ್ಲಿ(ಹೈಕು)
ಊರಾಚೆ (ಕಥಾ ಸಂಕಲನ
ಚುಟುಕು(ಸಂಕಲನ) 

 *ಸಂಪಾದಿತ ಕೃತಿಗಳು* 

1) ಅಮರ್ಜಾ 
2)ಸಂಕಥನ 
3)ಕನ್ನಡ ಸಾರಥಿ 
3)ಕಹಳೆ 
4)ವಿಜಯೀಭವ
      ಗಡಿ ಭಾಗ ಹಿರೋಳಿ ಗ್ರಾಮದಲ್ಲಿ 13 ಜನವರಿ 2025 ರಂದು ನಡೆದ ಅಳಂದ ತಾಲೂಕಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ. ನಾಡಿನ ವಿವಿಧ ಸಂಘ ಸಂಸ್ಥೆಗಳಿಂದ ಅನೇಕ ಪ್ರಶಸ್ತಿಗಳು, ಗೌರವ ಪುರಸ್ಕಾರಗಳು ಧರ್ಮಣ್ಣ ಧನ್ನಿ ಅವರಿಗೆ ಸಂದಿವೆ. ಕಲ್ಯಾಣ ಕರ್ನಾಟಕದ ಹೆಮ್ಮೆಯ ಸಾಹಿತಿ, ಶಿಕ್ಷಕರಾಗಿ ಜನಪ್ರಿಯರಾಗಿದ್ದಾರೆ.

       - ಸುರೇಖಾ ಕೆ ಬಮನಳ್ಳಿ.
                  ಕಡಗಂಚಿ